ನಿರ್ಭಯ- ನಿಮ್ಮವಳೇ ನಾ; ನತಧೃಷ್ಠೆ ಅಷ್ಟೇ..

ನಿ ರ್ಭಯಾ.. 
ಅಂತರಾಷ್ಠ್ರೀಯ ಮಟ್ಟದಲ್ಲಿ ಸುದ್ದಿಯಾಗಿ ದೇಶವೇ ನಿಂತು ಕಣ್ಣೀರು ಸುರಿಸಿದ್ದ ನನ್ನ ಅನ್ವರ್ಥ ನಾಮವದು. ಕೊನೆಗೂ ನನ್ನ ಮೇಲೆರಗಿ ನನ್ನ ದಾರುಣ ಅಂತ್ಯಕ್ಕೆ ಕಾರಣರಾದ ಕಡುಪಾಪಿಗಳಿಗಿಂದು ನ್ಯಾಯಾಲಯ ಕಡು ಶಿಕ್ಷೆ ವಿಧಿಸಿದೆ. ನನ್ನ ನೆನೆದು ಕಣ್ಣೀರು ಸುರಿಸಿದ್ದ, ಬೊಬ್ಬಿರಿದು ಆರ್ಭಟಿಸಿದ್ದ, ಪ್ರತಿಭಟಿಸಿ ನ್ಯಾಯ ಬೇಡಿದ್ದ ಜನರಿಂದು ಸ್ವಲ್ಪ ನಿರಾಳರಾಗಿದ್ದಾರೆ.. ಆದರೆ??

ನಾನು ಅದ್ಯಾವ ತಪ್ಪು ಮಾಡಿದ್ದೆ? ನಾನು ಮಾಡದ ತಪ್ಪಿಗೆ ಯಾಕೆ ನನಗೀ ಶಿಕ್ಷೆ? ನನ್ನ ದುರಂತ ಅಂತ್ಯಕ್ಕೆ ನನ್ನ ತಪ್ಪೇನಿತ್ತು. ಕ್ಷಣಕ್ಷಣವೂ  ಜೀವಂತವಾಗೇ ನರಳಿದ್ದವಳು ನಾನು. ನನ್ನ ಮೇಲೆರಗಿದ ಆ ಕಾಮುಕರ ಪೈಶಾಚಿಕ ಕೃತ್ಯಕ್ಕೆ ಇಡೀ ದೇಶವೇ ಕಣ್ಣೀರು ಸುರಿಸಿದೆ. ಪಾಪ, ನನ್ನ ಹೆತ್ತವರು ಅದು ಹೇಗೆ ತಾನೇ ಸಹಿಸಿಕೊಂಡಾರು? ನಾ ಪಟ್ಟ ನೋವು, ಸಂಕಟವನ್ನು ಅದ್ಯಾವ ಪದಗಳಲ್ಲಿ ಜೋಡಿಸಿಡಲಿ ಹೇಳಿ.. ಇಲ್ಲ ನನ್ನಲ್ಲಿ ಪದಗಳಿಲ್ಲ..
ಆ ದಿನ ನಡೆದ ಘೋರ ಕೃತ್ಯವನ್ನು ಯಾವ ಹೆಣ್​ ಕುಲ ತಾನೇ ಸಹಿಸಿಕೊಂಡೀತು? ಅದು ಅತ್ಯಂತ ಬೀಭತ್ಸಕಾರಿ ಕೃತ್ಯ. ಅಪರಾಧಿಗಳನ್ನು ಹೆತ್ತ ತಾಯ ಕರುಳೂ ಚುರ್ರ್​​ ಎಂಬಷ್ಠು ಕಠೋರವಾಗಿತ್ತು ಆ ಕಾಮಪಿಶಾಚಿಗಳ ರೌಧ್ರನರ್ತನ. ರೇಪ್​! ಹೌದು ರೇಪ್​ ಮನುಷ್ಯ ಜೀವಿ ಎಸಗುವ ಅತಿಘೋರ ಅಪರಾಧ. ಯಾವ ವ್ಯಾಖ್ಯಾನಗಳು ಹೇಳಿ? ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಕೃತ್ಯ ರೇಪ್​.. ಯಾಕಂದ್ರೆ, ಅಂತಹಾ ಕಾಮಪಿಪಾಸುಗಳು ನಮ್ಮ ನಡುವಿನವರೇ ಎಂಬುದೇ ದುರಂತ.. 

ಆದ್ರೆ, 2012ರ ಡಿಸೆಂಬರ್​ 26ರ ರಾತ್ರಿಯಲ್ಲೂ ಸಂಭವಿಸಿದ್ದು ಬರಿಯ ರೇಪ್​​ ಆಗಿರಲಿಲ್ಲ. ಯಾರೂ ಊಹಿಸದ, ಕಲ್ಪಿಸಿಕೊಳ್ಳಲೂ ಅಸಾಧ್ಯವಾದ, ಅಮಾನುಷ ಕೃತ್ಯವದು. ಆ ರಾತ್ರಿಯ ನೀರವತೆಗೆ ಭಂಗತಂದ ಕೃತ್ಯ ದೇಶವ್ಯಾಪಿ ಜನರನ್ನು ಬಡಿದೆಬ್ಬಿಸಿತ್ತು. ನನ್ನ ಮೇಲಿನ ಅತ್ಯಾಚಾರ ನಂತರದ ದಿನಗಳಲ್ಲಿ ನಿರ್ಭಯಾ ಪ್ರಕರಣವೆಂದೇ ಗುರುತಿಸಿಕೊಂಡಿತ್ತು. 

ನನ್ನ ಹೆಸರು ಜ್ಯೋತಿ ಸಿಂಗ್​. ಇಂಡಿಯಾದ ಯಾವುದೋ ಮೂಲೆಯಲ್ಲೇನಲ್ಲ; ರಾಷ್ಠ್ರ ರಾಜಧಾನಿ ದೆಹಲಿಯಲ್ಲೇ ಪಿಜಿಯಲ್ಲುಳಿದುಕೊಂಡು ಮೆಡಿಕಲ್​​ ಓದಿಕೊಂಡಿದ್ದೆ. ಅಮ್ಮ ಆಶಾದೇವಿ.. ಹೆಸರು ಹೇಳೋವಾಗಳು ಕಣ್ಣಾಲಿಗಳು ತೇವಗೊಳ್ಳುತ್ತವೆ. ನನ್ನ ಹೆತ್ತ ಆ ಹೆಣ್ಣನ್ನು ನೆನೆವಾಗ. ಹೃದಯ ಒತ್ತರಿಸಿ ಬರುತ್ತದೆ; ಆಕೆಯ ಗೋಳಾಟ ಕಂಡು. ಅಯ್ಯೋ ದೇವರೇ, ಯಾವ ತಾಯಿಗೂ ಇಂತಹದ್ದೊಂದು ಗೋಳು ಕೊಡಬೇಡ.. 

ಆ ರಾತ್ರಿ ಗಾಢಕತ್ತಲೆ ಏನಲ್ಲ. ಹೊನಲ ಬೆಳಕಿನ ರಾತ್ರಿಯದು. ತನ್ನ ಗೆಳೆಯ ಅವನೀಂದ್ರ ಪಾಂಡೆಯ ಜೊತೆ ಸಿನಿಮಾ ನೋಡಿಕೊಂಡು ಬಸ್ಸು ಹತ್ತಿದ್ದೆ; ಹತ್ತಿದ್ದಷ್ಟೇ ಸ್ಪಷ್ಟವಾಗಿ ನೆನಪಿದೆ, ಆದರೆ ಬಸ್ಸಿನಿಂದ ಹೊರ ಬಂದಿದ್ದು ಮಾತ್ರ ಜೀವಂತ ಶವವಾಗಿ. 13 ದಿನ ಆಸ್ಪತ್ರೆಗಳಲ್ಲಿ ನಿಸ್ತೇಜಳಾಗಿ ಶವದಂತೆ ಮಲಗಿದ್ದೆ. ಕೊನೆಗೂ ನಾನು ಬದುಕುಳಿಯಲೇ ಇಲ್ಲ. ನನ್ನ ಬದುಕಿಗಾಗಿ ದೇಶವ್ಯಾಪಿ ಮೊರೆ ಇಟ್ಟಿದ್ದ ಜನತೆಯ ಕೂಗೂ ಆ ಕ್ರೂರಿ ದೇವರಿಗೆ ಕೇಳಿಸಲೇ ಇಲ್ಲ.

ರಾತ್ರಿ 9:30ರ ಸಮಯ ಗೆಳೆಯನೊಂದಿಗೆ ದೆಹಲಿಯ ಸಾಕೇತ್​ನಲ್ಲಿ ಲೈಫ್​ ಆಫ್​ ಪೈ ಸಿನಿಮಾ ನೋಡಿ ಮನೆಗೆ ವಾಪಸ್ಸಾಗಲು ದ್ವಾರಕಾದ ಬಸ್ಸು ಹತ್ತಿದ್ದೆ. ನಾನು ಹತ್ತಿದ್ದ ಬಸ್​ ನಲ್ಲಿ ನಾನೂ ನನ್ನ ಗಳೆಯನ ಹೊರತು ಬಸ್​ ಚಾಲಕನ ಸಹಿತ ಒಟ್ಟು ಆರು ಮಂದಿ ಇದ್ದರು. ಮಾಮೂಲಿಯಂತೆ ಚಲಿಸುತ್ತಿದ್ದ ಬಸ್​​ ಹಾದಿ ಬದಲಿಸಿತ್ತು. ಬಸ್​​ನ ಬಾಗಿಲುಗಳು ಮುಚ್ಚಿಕೊಳ್ಳತೊಡಗಿದ್ದವು. ನಾವಿಬ್ಬರೂ ಬೆಚ್ಚಿಬಿದ್ದೆವು. ನನ್ನ ಗೆಳೆಯ ಅವನೀಂದ್ರ ಅಪೋಸ್​ ಮಾಡ ತೊಡಗಿದ್ದ. ಅಷ್ಟರಲ್ಲಿ ಅಲ್ಲಿದ್ದ ಓರ್ವನ ಗಡಸು ಧ್ವನಿ ನನ್ನ ಕಿವಿ ಹೊಕ್ಕಿತ್ತು..

ಬಸ್ಸಿನ ಬಾಗಿಲುಗಳು ಮುಚ್ಚಿಕೊಳ್ಳುತ್ತಿದ್ದಂತೆ ಅವನೀಂದ್ರ ವಿರೋಧಿಸತೊಡಗಿದ್ದ. ಎದ್ದು ಹೊರ ಬರಲು ಹವಣಿಸಿದ್ದ. ಅಷ್ಟರಲ್ಲಿ ಆ ಆರು ಜನರ ನಡುವಿನಲ್ಲಿದ್ದವನಲ್ಲೊಬ್ಬ `ಏನ್​ ಮಾಡ್ತಿದ್ರೀ? ನೀವಿಬ್ರೇ? ಈ ಸರಿರಾತ್ರಿಯ ಹೊತ್ತಿನಲ್ಲಿ? ಎಂದು ಪ್ರಶ್ನಿಸಿದವನೇ ನನ್ನತ್ತ ಕೆಕ್ಕರಿಸಿ ನೋಡತೊಡಗಿದ್ದ. ನಾವು ಉತ್ತರಿಸುವುದಕ್ಕೂ ಮುನ್ನವೇ, ಅವರ ನಡುವಿನಲ್ಲಿದ್ದ ಪಾಂಡೆ ಎಂಬಾತ ಅಲ್ಲೇ ಇದ್ದ ಕಬ್ಬಿಣದ ಸರಳಿನಿಂದ ಅವನೀಂದ್ರನಿಗೆ ಹೊಡೆದಿದ್ದ. ಬಸ್ಸು ಚಲಿಸುತ್ತಲೇ ಇತ್ತು..

ಬಸ್ಸು ಚಲಿಸುತ್ತಲೇ ಇತ್ತು. ಅವನೀಂದ್ರನನ್ನು ಹೊಡೆದಿದ್ದವನ ಧೃಷ್ಠಿ ನನ್ನತ್ತ ತಿರುಗಿತ್ತು. ನಾನು ಆತನ ಕಣ್ಣು ತಪ್ಪಿಸಿಕೊಳ್ಳುವುದಿರಲಿ ಆತನ ಕಬಂದ ಬಾಹುಗಳಿಂದ ತಪ್ಪಿಸಿಕೊಳ್ಳುವುದಕ್ಕೂ ಹರಸಾಹಸ ಪಡುವಂತಾಗಿತ್ತು. ಆತ ನನ್ನನ್ನು ಬಲವಾಗಿ ಹಿಡಿದು ಬಿಟ್ಟ. ನಾನು ವಿರೋಧಿಸುತ್ತಿದ್ದಂತೆ ಬಲವಾಗಿ ನನ್ನ ತಲೆಗೆ ಕಬ್ಬಿಣದ ಸರಳಿನಿಂದ ಬಡಿದು ಬಿಟ್ಟಿದ್ದರು..

ಅಲ್ಲಿದ್ದ ಯಾರಲ್ಲೂ ಮನುಷ್ಯತ್ವದ ಸಣ್ಣ ಎಳೆಯೂ ಗೋಚರಿಸುತ್ತಿರಲಿಲ್ಲ. ಬಲವಾಗಿ ನನ್ನನ್ನು ಹೊಡೆದವರು, ನಾನು ಕುಸಿದು ಬೀಳುತ್ತಿದ್ದಂತೆ ನನ್ನ ದೇಹದ ಮೇಲೆಲ್ಲಾ ಅಸಹ್ಯವಾಗಿ ಕೈಯಾಡಿಸತೊಡಗಿದ್ದರು. ಬಸ್ಸು ಚಾಲಕ ನನ್ನ ಅರಚಾಟಕ್ಕೆ ಸೊಪ್ಪು ಹಾಕಲಿಲ್ಲ. ಬಸ್​ ಚಲಿಸುತ್ತಲೇ ಇತ್ತು. ಒಬ್ಬರಾಗಿ ನನ್ನ ಮೇಲೆ ಎರಗುತ್ತಿದ್ದವರು. ವಿಚಿತ್ರವಾಗಿ, ಅಮಾನುಷವಾಗಿ ನಾನು ಜತನದಿಂದ ಕಾಪಾಡಿಕೊಂಡು ಬಂದಿದ್ದ ನನ್ನತನವನ್ನ ಹರಿದು ಮುಕ್ಕಿದ್ದರು.

ನಾನು ಬೊಬ್ಬಿರಿಯುತ್ತಿದ್ದೆ. ಗೋಳಿಡುತ್ತಿದ್ದೆ. ಧಾರಾಕಾರವಾಗಿ ನನ್ನ ಕಣ್ಣುಗಳಿಂದ ಕಣ್ಣೀರ ಕೋಡಿ ಹರಿಯತೊಡಗಿತ್ತು. ಎಲ್ಲವನ್ನೂ ಮೂಕ ಹಕ್ಕಿಯಂತೆ ಕಣ್ಣಿದ್ದೂ ಕುರುಡಾಗಿ ಗಮನಿಸುತ್ತಿದ್ದ ನನ್ನ ಗೆಳೆಯಾ. ಬಸ್ಸಿನ ಯಾವುದೋ ಒಂದು ಸೀಟಿನ ಮೂಲೆಯ ಅಡಿಯಲ್ಲಿ ಒರಗಿ ಕುಳಿತಿದ್ದವ, ಅತ್ತಿತ್ತ ಸರಿಯುತ್ತಿರಲಿಲ್ಲ. ಪಾಪ ಆ ಕ್ರೂರಿಗಳಿಂದ ಅವನಿಗೆ ಸರಿಯುವಂತಿರಲಿಲ್ಲ. 

ಒಬ್ಬೊಬ್ಬರಂತೆ ಸರದಿ ಸಾಲಿನಲ್ಲಿ ಬಂದ ಯಾರೋ ಹೆಣ್ಣು ಹೆತ್ತ ಆ ಐದು ಮಂದಿ ನನ್ನ ಇಂಚಿಂಚಾಗಿ ನರಳಿಸತೊಡಗಿದ್ದರು. ಅದು ಭಯಾನಕ ರೇಪ್​! ಯಾವ ಹೆಣ್ಣೂ ನಾ ಪಟ್ಟ ನೋವ ಪಡದಿರಲಿ.. ಯಾವ ಹೆಣ್ಣೂ ಅಂತಹ ಕಠೋರ ಕಾಮ ಪಿಪಾಸುಗಳಿಗೆ ಜನ್ಮ ಕೊಡದಿರಲಿ. ನನ್ನ ಮೇಲೆರಗಿ ಅತ್ಯಾಚಾರವೆಸಗುತ್ತಿದ್ದವರಲ್ಲಿ ಅದೇನು ವಿಕೃತಾನಂದವೋ?

ಚಲಿಸುತ್ತಿದ್ದ ಬಸ್​ ಯಾವುದೋ ಒಂದು ಸ್ತಬ್ಧವಾಗಿ ಬಿಟ್ಟಿತ್ತು. ನಾನು ಪ್ರಜ್ನಾಹೀನಳಾಗಿ ಬಿದ್ದಿದ್ದೆ. ನನ್ನ ಮೈಯ ಮೇಲೆ ಒಂದಿಂಚೂ ಬಟ್ಟೆ ಇರಲಿಲ್ಲ. ಈಗ ಚಾಲಕನ ಸರದಿ.. ಥೂ.. ಹೇಳಿಕೊಳ್ಳಲೂ ಅಸಹ್ಯವೆನಿಸುತ್ತದೆ. ನಾನ್ಯಾಕೆ ಅಸಹ್ಯ, ಮುಜುಗರ ಪಟ್ಟುಕೊಳ್ಳಬೇಕು? ಅಮ್ಮ ಹೇಳಿದ್ದು ಸರಿ,  ಅತ್ಯಾಚಾರದಂತಹ ಹೀನ ಕೃತ್ಯ ಎಸಗಿದವರು ತಲೆತಗ್ಗಿಸಿ ನಡೆಯಬೇಕೇ ಹೊರತು, ಅತ್ಯಾಚಾರ ಸಂತ್ರಸ್ತೆ ಅಥವಾ ಆಕೆಯ ಕುಟುಂಬದವರಲ್ಲ.

ಆ ಆರೂ ಜನರ ಕಾಮದ ದಣಿವು ನೀಗಿತ್ತು. ಆದರೆ?! ಅಷ್ಟಕ್ಕೇ ಅವರ ಕ್ರೌರ್ಯ ನಿಲ್ಲಲಿಲ್ಲ. ಅಮಾನುಷವಾಗಿ ಅಲ್ಲೇ ಪಕ್ಕದಲ್ಲೇ ಇದ್ದ ಕಬ್ಬಿಣದ ಸರಳಿನಿಂದ ನನ್ನ ಮೇಲೆ ಅಮಾನುಷವಾಗಿ ಬಾರಿಸತೊಡಗಿದ್ದರು. ಆ ಆರು ಜನರ ಕ್ರೌರ್ಯಕ್ಕೆ ನೆತ್ತರ ಹೊಳೆ ಹರಿಸಿ ಹರಿದು ಛಿಂದಿಯಾಗಿದ್ದ ನನ್ನ ಗುಪ್ತಾಂಗದೊಳಕ್ಕೆ ಕಬ್ಬಿಣದ ಸರಳಿನಿಂದ ಇರಿದು ನನ್ನನ್ನು ಇಂಚಿಂಚೂ ನರಳಿಸಲಾರಂಭಿಸಿದರು. ನನ್ನ ದೇಹ ಜಡವಾಗಿ ಬಿಟ್ಟಿತ್ತು. ಮಾತುಗಳು ಹೊರ ಬರುತ್ತಿರಲಿಲ್ಲ. ದೇಹ ಶಕ್ತಿ ಕಳೆದು ನಿಸ್ತೇಜವಾಗಿ ಬಿದ್ದು ಬಿಟ್ಟಿತ್ತು. ಅವನೀಂದ್ರನನ್ನು ಹೊರಗೆಳೆದ ಅವರು ಆತನ ಮೇಲೆ ಬಸ್​ ಹತ್ತಿಸಲು ಪ್ರಯತ್ನಿಸಿದ್ದರು. ಆತನ ಕಾಳಿನ ಮೇಲೆ ಬಸ್​ ಹರಿದಿತ್ತು. ಆತ ಬದುಕುಳಿದಿದ್ದ. ಅವರು ಮೆಲ್ಲನೆ ಅಲ್ಲಿಂದ ಕದಲಿದ್ದರು..

ಜಡವಾಗಿ ಬಿದ್ದ ನನ್ನ ದೇಹವನ್ನು ಗಮನಿಸಿದವರು ಯಾರೋ ಪೊಲೀಸ್​ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕೆಲವೇ ಹೊತ್ತಲ್ಲಿ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ನನ್ನ ಮೇಲೆ ನಡೆದಿದ್ದ ಪೈಶಾಚಿಕ ಕೃತ್ಯ, ಮರ್ಮಾಂಗಕ್ಕಾದ ಗಾಯಗಳು ಅದಾಗಲೇ ನನ್ನ ಕನಸುಗಳನ್ನು ಜೀವಂತವಾಗಿ ಸುಟ್ಟು ಬಿಟ್ಟಿದ್ದವು. ನಾನು ಬದುಕುಳಿಯುವುದು ಕಷ್ಟಸಾಧ್ಯ ಎಂದು ವೈಧ್ಯರು ಹೇಳುವಾಗಲಂತೂ, ಒಮ್ಮೆ ಪ್ರಾಣ ಹೋದರೆ ಸಾಕು ಎಂದನ್ನಿಸಿತ್ತು ನನಗೆ.. ಕೂಡಲೇ ನನ್ನನ್ನು ಸಿಂಪಾಪುರದ ಆಸ್ಪತ್ರೆಗೆ ಸಾಗಿಸಲಾಯ್ತು. ದೇಹ ತಣ್ಣಗೆ ಉಸಿರಾಡುತ್ತಿದ್ದ ನನ್ನ ಏರಿಳಿತ ಗಮನಿಸಿ ದೇಶಕ್ಕೆ ದೇಶವೇ ದೇವರಲ್ಲಿ ಪ್ರಾರ್ಥಿಸತೊಡಗಿದ್ದರು. ಕೊನೆಗೂ 2013ರ ಜನವರಿ 3ರ ರಾತ್ರಿ ನನ್ನ ಉಸಿರು ಕೊನೆಗೊಂಡಿತ್ತು. 
ಕೃತ್ಯ ರಾಷ್ಠ್ರ ವ್ಯಾಪಿ ಸುದ್ದಿಯಾಗುತ್ತಿದ್ದಂತೆಯೇ ಅಲರ್ಟ್​ ಆದ ಪೊಲೀಸರು ಒಟ್ಟು ಆರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಸ್​ ಚಾಲಕ ರಾಮ್‌ ಸಿಂಗ್‌, ಆತನ ಸೋದರ ಮುಖೇಶ್‌ ಸಿಂಗ್​, ಪವನ್‌ ಗುಪ್ತಾ, ವಿನಯ್‌ ಶರ್ಮಾ ಮತ್ತು ಅಕ್ಷಯ ಠಾಕೂರ್​ ಎಂಬ ಐವರ ಜೊತೆ ಇನ್ನೂ 17ರ ಹರೆಯದ ಒಬ್ಬ ಬಾಲಾಪರಾಧಿಯನ್ನೂ ಪೊಲೀಸರು ಬಂಧಿಸಿದ್ದರು. ಹೆಣ್ಣಿನ ಮೇಲೆರಗಿ ಅತ್ಯಾಚಾರವೆಸಗಬಲ್ಲ ಅವನೆಂಥಾ ಬಾಲಾಪರಾಧಿ? ಆರು ಜನರ ಆರೋಪ ಸಾಬೀತಾಗುತ್ತಿದ್ದಂತೆ ಬಂಧಿಸಿ ಜೈಲಿನಲ್ಲಿಟ್ಟರು.

ಅತ್ಯಾಚಾರಿಗಳ ವಿರುದ್ಧ ಇಂಡಿಯಾದುದ್ದಕ್ಕೂ ಪ್ರತಿಭಟನೆಗಳು ನಡೆದರೆ, ಬಿಬಿಸಿ ಇಂಡಿಯಾದ ಮಗಳು ಎಂದು ವರದಿ ಪ್ರಸಾರ ಮಾಡಿತ್ತು. ಜಗತ್ತೇ ಇಂಡಿಯಾದತ್ತ ತಿರುಗಿ ನೋಡಿತ್ತು. ಅತ್ಯಾಚಾರಿಗಳಿಗೆ ಉಳಿಗಾಲವಿಲ್ಲ ಎಂಬ ಸುದ್ದಿ ಎಲ್ಲೆಡೆ ಹರಡತೊಡಗುತ್ತಿದ್ದಂತೆ 2013ರ  ಮಾರ್ಚ್​ 11ರಂದು ತಿಹಾರ್​ ಜೈಲಿನಲ್ಲಿದ್ದ ಬಂಧಿತ ಬಸ್​ ಚಾಲಕ ರಾಮ್​ ಸಿಂಗ್​ ಬಟ್ಟೆ ಯಿಂದ ಕೊರಳ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ನನ್ನ ಕಣ್ಣೀರ ಶಾಪ.. ಹೈಕೋರ್ಟ್​ ಓರ್ವನನ್ನು ಬಾಲಾಪರಾಧಿ ಎಂದು ಪರಿಗಣಿಸಿ ನಾಲ್ವರಿಗೆ ಮರಣ ದಂಡನೆ ವಿಧಿಸಿದ್ದರೆ, ಕೃತ್ಯವೆಸಗಿದ್ದ ಮತ್ತೋರ್ವ ವಿನಯ್​ ಶರ್ಮಾ 2016 ರ ಆಗಸ್ಟ್​ ನಲ್ಲಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದ.

ಹೈಕೋರ್ಟ್​ ಮರಣದಂಡನೆ ವಿಧಿಸುತ್ತಿದ್ದಂತೆ ನನ್ನನ್ನು ಬರ್ಬರವಾಗಿ ಮರ್ಮಾಂಗಕ್ಕಿರಿದು ಕೊಂದವರು ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಇಂದು ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್​ ಕೊನೆಗೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಮರಣ ದಂಡನೆ ವಿಧಿಸಿ ತೀರ್ಪು ನೀಡುವ ಮೂಲಕ ನ್ಯಾಯ ಅರಸಿದ್ದ ಜನತೆಯ ವಿಶ್ವಾಸವನ್ನು ಅಣಕಿಸಿಲ್ಲ. ಅತ್ಯಾಚಾರಿಗಳಿಗೆ ಇದೊಂದು ಪಾಠವಾಗಬೇಕಿದೆ. 

ಆದರೆ, ದಿನನಿತ್ಯ ಅತ್ಯಾಚಾರ ಪ್ರಕರಣಗಳೇನೂ ಕ್ಷೀಣಿಸಿಲ್ಲ. ನಿತ್ಯ ಹೆಣ್ಣಿನ ಮೇಲೆರಗುವ ಕಾಮ ಪಿಪಾಸುಗಳ ಸಂಖ್ಯೆ ವೃದ್ಧಿಸುತ್ತಲೇ ಇದೆ. ನಿತ್ಯದ ಅತ್ಯಾಚಾರ ಪ್ರಕರಣಗಳು ಹೆಚ್ಚು ಸುದ್ದಿ ಮಾಡುತ್ತಿಲ್ಲವಷ್ಟೇ. ಕಾಮಪಿಪಾಸುಗಳ ಕೈಲಿ ನಲುಗಿ, ನರಳೀ ನರಳೀ ಸತ್ತ ನನಗೆ ಗೊತ್ತು. ಸಂತ್ರಸ್ಥೆಯ ವೇದನೆಯೇನೆಂದು. ಇನ್ನು ನನ್ನ ಸಾವಿಗೆ ನ್ಯಾಯ ದೊರಕಲು ಹೇಗೆ ಸಾಧ್ಯ? ಪ್ರತಿಯೋರ್ವ ಅತ್ಯಾಚಾರಿಗೂ ಕಠಿಣ ಶಿಕ್ಷೆಯಾಗಬೇಕಿದೆ ಆಗಲೇ ನನಗೊಂದು ನ್ಯಾಯ, ನನ್ನ ಸಾವಿಗೊಂದು ಅರ್ಥ ಸಿಗಬಹುದು. ನನ್ನ ಘಟನೆಯ ನಂತರ ಕಾನೂನು ಕಠಿಣವಾಗಿರಬಹುದು, ಅದು ಚಾಲ್ತಿಗೆ ಬರಬೇಕು. ನನ್ನ ಪ್ರಕರಣದ ತೀರ್ಪಿನಂತೆಯೇ..

ಜೂನ್ 7, 2013 ರಂದು ಕಲ್ಕತ್ತಾದಲ್ಲಿ 20 ವರ್ಷದ ಕಾಲೇಜು ವಿಧ್ಯಾರ್ಥಿನಿಯ ಮೇಲೆ 9 ಜನ ವಿಕೃತ ಕಾಮಿಗಳು ಸಾಮೂಹಿಕ ಅತ್ಯಾಚಾರವೆಸಗಿ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾರೆ. ಕಳೆದ ವರ್ಷ  ಫೆಬ್ರುವರಿ 23ರಂದು ದೆಹಲಿಯ ಆಸ್ಪತ್ರೆಯೊಂದರಲ್ಲಿ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. 2016 ರ ಮಾರ್ಚ 8ರಂದು ರಾಷ್ಠ್ರ ರಾಜಧಾನಿ ದೆಹಲಿಯಲ್ಲೇ 15 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಅವಳನ್ನು ಸುಟ್ಟು ಹಾಕಲಾಗಿದೆ ಹೀಗೆ ಹೇಳುತ್ತಾ ಹೋದರೆ, ಒಂದೇ ಎರಡೇ ನಿತ್ಯ ಹಲವಾರು ಪ್ರಕರಣಗಳು ತೆರೆಮರೆಯಲ್ಲೇ ಮರೆಯಾಗುತ್ತಿವೆ. ಎಲ್ಲಾ ಅತ್ಯಾಚಾರದ ಅಪರಾಧಿಗಳಿಗೂ ಗಲ್ಲು ಶಿಕ್ಷೆ ವಿಧಿಸಬೇಕು  ಆಗಲೇ ನನ್ನ ಜೀವಂತ ಸಮಾಧಿಯೊಂದು ಸ್ಮಾರಕವಾದೀತು.

ಮೂವರು ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟ್​ ವಿಭಾಗೀಯ ಪೀಠ ನನ್ನ ಮೇಲಿನ ಪೈಶಾಚಿಕ ಕೃತ್ಯವನ್ನು ಬಣ್ಣಿಸಿರುವುದ್ಕಕೂ ಹೆಚ್ಚಿನ ಸಾಕ್ಷ್ಯ ಬೇಕೇ ನನ್ನ ಅಂದಿನ ನರಳಾಟಕ್ಕೆ. ನಿರ್ಭಯಾಳ ಮರಣೋತ್ತರ ವರದಿ ಆಕೆ ಮೇಲೆ ಆರೋಪಿಗಳುಎಷ್ಟೊಂದು ಅಮಾನುಷವಾಗಿ ವರ್ತಿಸಿರುವುದಕ್ಕೆ ಸಾಕ್ಷಿಯಾಗಿದೆ. ಅಪರಾಧಿಗಳು ನಿರ್ಭಯಾಳನ್ನು ಅನುಭವಿಸುವ ವಸ್ತುವೆಂದು ತಿಳಿದಿದ್ದರು. ಆಕೆಯ ಸ್ನೇಹಿತನ ಮೇಲೆ ಬಸ್ ಹರಿಸುವ ಮೂಲಕ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದರು ಎಂದು ನುಡಿದಿರುವ ಸುಪ್ರೀಂ ಕೋರ್ಟ್​ ಈ ಮೂಲಕ ಒಂದು ದೇಶದ ಜನರಲ್ಲೊಂದು ಭರವಸೆ ಮೂಡಿಸಿದೆ. ಕೊನೆಗೊಂದು ಮೊರೆ ದೇವರೇ, ನನ್ನ ಸ್ಥಿತಿ ಯಾರಿಗೂ ಬಾರದಿರಲಿ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿ. ನ್ಯಾಯ ಗೆಲ್ಲಲಿ.. ಜೈ ಹಿಂದ್​ 

ಇಂತೀ ನಿಮ್ಮ ನಿರ್ಭಯಾ
ಜ್ಯೋತಿ ಸಿಂಗ್

Comments